ಪಶ್ಚಿಮ ಬಂಗಾಳ(18-02-2021): ಪಶ್ಚಿಮ ಬಂಗಾಳದಲ್ಲಿ ಸಂಭವಿಸಿದ ಬಾಂಬ್ ಸ್ಪೋಟದಲ್ಲಿ ಉಪ ಕಾರ್ಮಿಕ ಸಚಿವ ಝಾಕಿರ್ ಹೊಸೇನ್ ಸೇರಿದಂತೆ ಹಲವು ಟಿಎಂಸಿ ಕಾರ್ಯಕರ್ತರು ಗಾಯಗೊಂಡಿರುವ ಘಟನೆ ತಡರಾತ್ರಿ ಮುರ್ಷಿದಾಬಾದ್ ಜಿಲ್ಲೆಯ ನಿಮ್ತಿಟಾ ರೈಲ್ವೆ ನಿಲ್ದಾಣದ ಹೊರಗೆ ನಡೆದಿದೆ.
ಸಚಿವರಿಗೆ ಎಡಭಾಗದಲ್ಲಿ, ಮುಖ್ಯವಾಗಿ ಕಾಲಿಗೆ ಗಾಯಗಳಾಗಿವೆ. ರಾತ್ರಿ 11.15 ರವರೆಗೆ ಈ ಘಟನೆಯ ಬಗ್ಗೆ ಯಾವುದೇ ಪೊಲೀಸ್ ಅಧಿಕಾರಿ ಪ್ರತಿಕ್ರಿಯಿಸಿಲ್ಲ. ಆದರೆ ಟಿಎಂಸಿಯ ಮುರ್ಷಿದಾಬಾದ್ ಜಿಲ್ಲಾ ಘಟಕದ ಅಧ್ಯಕ್ಷ ಅಬು ತಾಹರ್ ಖಾನ್, ಹೊಸೈನ್ ಅವರನ್ನು ಜಂಗೀಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅವರನ್ನು ಕೋಲ್ಕತ್ತಾದ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.
ಘಟನಾ ಸ್ಥಳಕ್ಕೆ ಭಾರಿ ಪೊಲೀಸ್ ತುಕಡಿಯನ್ನು ನೇಮಿಸಲಾಗಿದೆ. ಈ ಹಿಂದೆ ಕಾಂಗ್ರೆಸ್ನಲ್ಲಿದ್ದ ಹೊಸೈನ್ ಟಿಎಂಸಿಗೆ ಸೇರಿಕೊಂಡು 2016 ರಲ್ಲಿ ಜಂಗೀಪುರ ವಿಧಾನಸಭಾ ಸ್ಥಾನದಲ್ಲಿ ಗೆಲುವನ್ನು ಸಾಧಿಸಿದ್ದರು. ಹೊಸೈನ್ಗೆ ಹಲವಾರು ಹೊಲಿಗೆಗಳನ್ನು ಹಾಕಲಾಗಿದೆ.ಅವರು ಬಹಳಷ್ಟು ರಕ್ತವನ್ನು ಕಳೆದುಕೊಂಡಿದ್ದಾರೆ ಎಂದು ವೈದ್ಯರು ನಮಗೆ ತಿಳಿಸಿದ್ದಾರೆ ಎಂದು ಖಾನ್ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ದಾಳಿ ನಡೆಸಿದೆ ಎಂದು ಖಾನ್ ಆರೋಪಿಸಿದ್ದಾರೆ.