ಬೆಂಗಳೂರು(24-11-2020): ಹೈದರಾಬಾದನ್ನು ಭಾಗ್ಯನಗರ ಎಂದ ಬಿಜೆಪಿ ಸಂಸದ ತೇಜಸ್ವಿಸೂರ್ಯಗೆ ಟ್ವಿಟ್ಟಿಗರು ಸಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹೈದರಾಬಾದಿಗರ ಭಾವನೆ ಜೊತೆ ತೇಜಸ್ವಿ ಚೆಲ್ಲಾಟವಾಡಿದ್ದು, ತೆಲುಗರು ತೇಜಸ್ವಿಗೆ ಬಾಯಿಗೆ ಬಂದಂತೆ ಮಂಗಳಾರತಿ ಮಾಡಿದ್ದಾರೆ.
ನಿನ್ನೆ ಸಂಜೆ ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಹೈದರಾಬಾದ್ ಬಗ್ಗೆ ಟ್ವೀಟ್ ಮಾಡಿದ್ದಾರೆ. “ಭಾಗ್ಯನಗರದ ಆತ್ಮೀಯ ಯುವಜನರು” ಎಂದು ಅವರು ತಮ್ಮ ಟ್ವೀಟ್ ನ್ನು ಪ್ರಾರಂಭಿಸಿದರು. ಟ್ವೀಟ್ ಜೊತೆಗೆ ಹಂಚಿಕೊಂಡ ಪೋಸ್ಟರ್ ನಲ್ಲಿ ‘ಚೇಂಜ್ ಹೈದರಾಬಾದ್’ ಎಂದು ಬರೆದುಕೊಂಡಿದ್ದಾರೆ.
ನಿನ್ನೆ ತೇಜಸ್ವಿಗೆ ತೆಲುಗಿನಲ್ಲಿ ಕೆಟ್ಟ ಪದಗಳಿಂದ ಟೀಕಿಸುವ ಟ್ವೀಟ್ ಗಳು ಬಹಿರಂಗವಾಗಿದೆ. ನಿಂದನೀಯ ಹ್ಯಾಶ್ಟ್ಯಾಗ್ನಲ್ಲಿ ಪಾಲ್ಗೊಳ್ಳಲು ಇಷ್ಟಪಡದ ಬಹಳಷ್ಟು ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು #ItIsHyderabadNotBhagyanagar ಹ್ಯಾಶ್ಟ್ಯಾಗ್ ನ್ನು ಮಾಧ್ಯಮವಾಗಿ ಬಳಸಿದ್ದಾರೆ. ಕೆಲವರು ಸೂರ್ಯಗೆ ಗೋಬ್ಯಾಕ್ ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಅನೇಕ ಬಿಜೆಪಿ ನಾಯಕರು ಹೈದರಾಬಾದ್ ಹೆಸರನ್ನು ಬದಲಾಯಿಸುವಂತೆ ಕೇಳಿಕೊಂಡಿದ್ದಾರೆ. 2018 ರಲ್ಲಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಗರದಲ್ಲಿ ಪ್ರಚಾರ ಮಾಡುವಾಗ ಹೈದರಾಬಾದ್ ಅನ್ನು ‘ಭಾಗನ್ಯಗರ’ ಎಂದು ಮರುನಾಮಕರಣ ಮಾಡುವ ಭರವಸೆ ನೀಡಿದ್ದರು. ಇದೀಗ ಸಂಸದ ತೇಜಸ್ವಿಯ ಟ್ವೀಟ್ ಮತ್ತೆ ವಿವಾದದ ಕಿಡಿಯನ್ನು ಎಬ್ಬಿಸಿದೆ.
ಬಿಜೆಪಿ ಆಡಳಿತದ ರಾಜ್ಯ ಉತ್ತರಪ್ರದೇಶದಲ್ಲಿ ಈ ಮೊದಲು ಹಲವು ನಗರಗಳ ಹೆಸರನ್ನು ಯೋಗಿ ಸರಕಾರ ಬದಲಿಸಿತ್ತು. ಇದೀಗ ಹೈದರಾಬಾದ್ ಮೇಲೆ ಮುಂದಿನ ಚುನಾವಣೆ ದೃಷ್ಟಿಯಿಂದ ಬಿಜೆಪಿ ಕಣ್ಣಿಟ್ಟಿದ್ದು, ಭಾವನಾತ್ಮಕವಾಗಿ ಜನರನ್ನು ಸೆಳೆಯಲು ಪ್ರಯತ್ನಿಸುತ್ತಿದೆ.