ಬೆಂಗಳೂರು: ಇಲ್ಲಿಯವರೆಗೆ ಸರ್ಕಾರದ ವಿರುದ್ಧ ರಾಸಲೀಲೆ ಸಿಡಿ ಪ್ರಕರಣದ ಬಗ್ಗೆ ಧ್ವನಿ ಎತ್ತದ ವಿಪಕ್ಷ ಕಾಂಗ್ರೆಸ್ ಇಂದಿನಿಂದ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ಸಿಡಿ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ಕೊಡುವಂತೆ ನಿಲುವಳಿ ಸೂಚನೆ ಮಂಡಿಸಲು ‘ಕೈ’ ನಿರ್ಧಾರಿಸಿದೆ. ಸಿಡಿ ಪ್ರಕರಣ ಅದರಲ್ಲಿ ಆಡಿರುವ ಕೆಲವು ಮಾತು, ವಿಡಿಯೋ ಎಲ್ಲದರ ಬಗ್ಗೆಯೂ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ನಿಲುವಳಿ ಸೂಚನೆ ಮಂಡಿಸಲು ವಿಪಕ್ಷ ನಾಯಕ ಸಿದ್ದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಾಳಯ ಎಲ್ಲಾ ರೀತಿಯ ಸಿದ್ಧತೆ ನಡೆಸಿದೆ.
ಇಂದು ಸಾಹುಕಾರ, ಮಹಾನಾಯಕ, ಭ್ರಷ್ಟಾಚಾರ ಚಾರ್ಜಸ್ ಸೇರಿದಂತೆ ರಾಸಲೀಲೆಯ ಪಿನ್ ಟು ಪಿನ್ ಮಾಹಿತಿ ಇಂದು ಸದನದಲ್ಲಿ ಸದ್ದು ಮಾಡುವ ಸಾಧ್ಯತೆ ಇದೆ. ಸಿಡಿ ಪ್ರಕರಣ ಬೆನ್ನಲ್ಲೇ ಕೋರ್ಟ್ ಮೊರೆ ಹೋದ 6 ಜನ ಸಚಿವರ ಬಗ್ಗೆಯೂ ಚರ್ಚೆಗೆ ಕಾಂಗ್ರೆಸ್ ಪಟ್ಟು ಹಿಡಿಯಲು ನಿರ್ಧರಿಸಿದೆ. ಮಾಜಿ ಸಚಿವ ಜಾರಕಿಹೊಳಿ ಸಿಡಿ ಸಂಕಷ್ಟದ ಜೊತೆಗೆ 6 ಜನ ಸಚಿವರ ಕೋರ್ಟ್ ಕಹಾನಿ ಸಚಿವರಿಗೆ ಹಾಗೂ ಸರ್ಕಾರಕ್ಕೆ ಬಿಸಿತುಪ್ಪವಾಗಲಿದೆ.
ಇಂದು ಸದನದಲ್ಲಿ ಸಿಡಿ ಪ್ರಕರಣವನ್ನು ಚರ್ಚೆಗೆ ತಗೆದುಕೊಳ್ಳಲು ಕಾಂಗ್ರೆಸ್ ಪಾಳಯ ತೀರ್ಮಾನಿಸಿದೆ. ಆದರೆ ಕಾಂಗ್ರೆಸ್ಸಿನ ಪಟ್ಟು ನಿಲುವಳಿಗೆ ಸ್ಪೀಕರ್ ಅವಕಾಶ ನೀಡಬಹುದೇ ಎಂಬುದು ಈಗಿರುವ ಕುತೂಹಲ. ಸಿಡಿ ಹಗರಣ ಸಂಬಂಧ ಚರ್ಚೆಗೆ ಬೇಕಾದ ಎಲ್ಲಾ ಉತ್ತರ ನೀಡಲು ಬಿಜೆಪಿ ಸರ್ಕಾರ ಕೂಡ ಸಿದ್ಧವಿದೆ ಎಂಬುದು ಮಾಹಿತಿ ಇದೆ. ಒಟ್ಟಿನಲ್ಲಿ ಇಂದಿನ ಸದನ ‘ಸಿಡಿ’ಮಯ ಆದರೂ ಆಶ್ಚರ್ಯ ಇಲ್ಲ.