ಬೆಂಗಳೂರು: ಶಿವಮೊಗ್ಗದಲ್ಲಿ ಮಾರ್ಚ್ 20ರಂದು ನಡೆದ ರೈತ ಮಹಾಪಂಚಾಯತ್ ಸಮಾವೇಶದಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಅವರು ಪ್ರಚೋದನಕಾರಿ ಭಾಷಣ ಮಾಡಿದರು ಎನ್ನುವ ಕಾರಣಕ್ಕೆ ಶಿವಮೊಗ್ಗ ಮತ್ತು ಹಾವೇರಿಯಲ್ಲಿ ಪ್ರಕರಣ ದಾಖಲಾಗಿರುವುದು ಖಂಡನೀಯ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
‘ರೈತನಾಯಕ ರಾಕೇಶ್ ಟಿಕಾಯತ್ ಅವರ ವಿರುದ್ಧ ಶಿವಮೊಗ್ಗ ಮತ್ತು ಹಾವೇರಿ ಪೊಲೀಸರು ಪ್ರಕರಣ ದಾಖಲಿಸಿರುವುದು ಖಂಡನೀಯ. ತಾನೊಬ್ಬ ರೈತನಾಯಕನೆಂದು ಬಿಂಬಿಸುತ್ತಾ ಮುಖ್ಯಮಂತ್ರಿ ಪಟ್ಟಕ್ಕೇರಿರುವ ಬಿ.ಎಸ್ ಯಡಿಯೂರಪ್ಪ ಅವರ ಅಸಲಿ ಮುಖ ಮತ್ತೊಮ್ಮೆ ಅನಾವರಣಗೊಂಡಿದೆ. ತಕ್ಷಣ ಈ ಪ್ರಕರಣವನ್ನು ಹಿಂದೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ರೈತವಿರೋಧಿ ಬಿಜೆಪಿಗೆ ಕರಾಳ ಕೃಷಿಕಾಯ್ದೆಯನ್ನು ವಿರೋಧಿಸುವವರು ಅಪರಾಧಿಗಳಂತೆ ಕಾಣುವುದು ಸಹಜವೇ ಆಗಿದೆ. ಆದರೆ ದೇಶದ ಜನತೆಗೆ ನಿಜವಾದ ಅಪರಾಧಿಗಳು ಯಾರೆಂದು ಗೊತ್ತಾಗಿದೆ..
ಪೊಲೀಸ್ ಬಲಪ್ರಯೋಗದಿಂದ ರೈತಶಕ್ತಿಯನ್ನು ಹಣಿಯಬಹುದೆಂದು ಬಿಜೆಪಿ ತಿಳಿದುಕೊಂಡಿದ್ದರೆ ಅದು ಭ್ರಮೆ ಎಂದು ಸಿದ್ದರಾಮಯ್ಯ ಬಿಜೆಪಿಯನ್ನು ಒತ್ತಾಯಿಸಿದ್ದಾರೆ.