ನವದೆಹಲಿ(25-10-2020): ಚೀನಾವು ಭಾರತದ ಭೂ ಪ್ರದೇಶಗಳನ್ನು ವಶಪಡಿಸಿಕೊಂಡಿರುವುದು ಆರೆಸ್ಸೆಸ್ ಮುಖಂಡ ಮೋಹನ್ ಭಾಗವತಿಗೆ ತಿಳಿದಿದೆ. ಆದರೆ ಸತ್ಯವನ್ನು ಎದುರಿಸಲು ಅವರಿಗೆ ಭಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಚೀನಾ ವಿರುದ್ಧ ಸೇನಾ ಕಾರ್ಯಾಚರಣೆಗೆ ಸಿದ್ಧವಾಗಿರಬೇಕಿದೆ ಎಂಬ ಮೋಹನ್ ಭಾಗವತ್ ಹೇಳಿಕೆಗೆ ಪ್ರತಿಕ್ರಿಯೆಯೆಂಬಂತೆ ರಾಹುಲ್ ಗಾಂಧಿಯವರ ಈ ಹೇಳಿಕೆ ಹೊರಬಿದ್ದಿದೆ.
“ಒಳಗಿಂದೊಳಗೇ ಮೋಹನ್ ಭಾಗವತಿಗೆ ಸತ್ಯ ತಿಳಿದಿದೆ. ಆದರೆ, ಅವರಿಗೆ ಸತ್ಯವನ್ನು ಎದುರಿಸಲು ಭಯವಿದೆ. ಚೀನಾವು ನಮ್ಮ ಭೂಪ್ರದೇಶವನ್ನು ವಶಪಡಿಸಿಕೊಂಡಿದೆ. ಇದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಕೇಂದ್ರ ಸರ್ಕಾರ ಮತ್ತು ಆರೆಸ್ಸೆಸ್.” ಎಂದು ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.
“ಚೀನಾವು ಭಾರತದ ಗಡಿ ಪ್ರದೇಶದಲ್ಲಿ ಹೇಗೆಲ್ಲಾ ಒಳ ನುಗ್ಗಲು ಪ್ರಯತ್ನಿಸುತ್ತಿದೆ ಎನ್ನುವುದು ಜಗತ್ತಿಗೆ ತಿಳಿದಿದೆ. ತೈವಾನ್, ವಿಯೆಟ್ನಾಂ, ಜಪಾನ್, ಅಮೇರಿಕಾದೊಂದಿಗೂ ಅವರು ಯುದ್ಧ ಮಾಡಿದ್ದಾರೆ. ನಮ್ಮ ಸೈನಿಕರೂ, ಸರಕಾರವೂ, ಜನತೆಯೂ ಚೀನಾಗೆ ತಕ್ಕ ಉತ್ತರ ನೀಡಿವೆ. ಆದರೆ ನಮ್ಮ ಉದಾರತೆಯನ್ನು ಅವರು ದೌರ್ಬಲ್ಯವೆಂದು ತಿಳಿಯಬಾರದು. ಚೀನಾಗೆ ವಿರುದ್ಧವಾಗಿ ನೆರೆಯ ದೇಶಗಳಾದ ನೇಪಾಳ, ಶ್ರೀಲಂಕಾ ಜೊತೆ ಮೈತ್ರಿ ಮಾಡಬೇಕು.” ಎಂದು ಮೋಹನ್ ಭಾಗವತ್ ಪ್ರತಿಪಾದಿಸಿದ್ದರು.