ಬೆಂಗಳೂರು: 225 ಶಾಸಕರು ಸತ್ಯ ಹರಿಶ್ಚಂದ್ರರಾ? ಅವರೆಲ್ಲರೂ ಏಕಪತ್ನಿ ವ್ರತಸ್ಥರೇನು? ಯಾರು ಯಾರಿಗೆ ಅಕ್ರಮ ಸಂಬಂಧ ಇದೆ ಎಂಬುದು ತನಿಖೆ ಆಗಲೆಂದು ಆಗ್ರಹಿಸಿದ ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿಕೆ ಇಂದಿನ ವಿಧಾನಸಭೆಯ ಕಲಾಪದಲ್ಲಿ ಭಾರಿ ಚರ್ಚೆಯ ವಿಷಯವಾಗಿತ್ತು. ಸಚಿವ ಡಾ.ಸುಧಾಕರ್ ಅವರ ಹೇಳಿಕೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿಕೆಶಿ, ಸತೀಶ್ ಜಾರಕಿಹೊಳಿ, ಕುಮಾರಸ್ವಾಮಿ ಸೇರಿದಂತೆ ಹಲವು ಶಾಸಕರು, ಮಹಿಳಾ ಶಾಸಕಿಯರು ಹಾಗೂ ಸಚಿವರು ಆಕ್ಷೇಪ ವ್ಯಕ್ತವಾಗುತ್ತಿದಂತೆ ಡಾ.ಸುಧಾಕರ್ ಇದೀಗ ಮರು ಪ್ರತಿಕ್ರಿಯೆ ನೀಡಿದ್ದಾರೆ.
‘ಕೆಲ ನಾಯಕರ ಏಕಪಕ್ಷೀಯ, ಪೂರ್ವಗ್ರಹ ಪೀಡಿತ ಹೇಳಿಕೆಗಳಿಂದ ಬೇಸತ್ತು ಅವರ ನೈತಿಕತೆಯನ್ನು ಪ್ರಶ್ನಿಸಿ ಬೆಳಗ್ಗೆ ನಾನು ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಂಡಿದೆ. ಎಲ್ಲಾ ಮಾನ್ಯ ಶಾಸಕ ಮಿತ್ರರ ಬಗ್ಗೆ ನನಗೆ ಅಪಾರವಾದ ಗೌರವ ಇಟ್ಟುಕೊಂಡಿದ್ದೇನೆ. ಹೀಗಾಗಿ ಯಾರಿಗಾದರೂ ನನ್ನ ಹೇಳಿಕೆಯಿಂದ ನೋವಾಗಿದ್ದಲ್ಲಿ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ. ನಮ್ಮ ಹದಿನೇಳು ಜನರ ವಿರುದ್ದ ತೇಜೋವಧೆ ಯತ್ನ ನಡೆಸಿದ್ದ ಕೆಲ ನಾಯಕರ ವಿರುದ್ಧ ಮಾತ್ರವೇ ನಾನು ಹೇಳಿಕೆ ನೀಡುವ ಯತ್ನ ಮಾಡಿದ್ದೇನೆಯೇ ಹೊರತು ಎಲ್ಲಾ ಶಾಸಕರಿಗೆ ನೋವು ಉಂಟು ಮಾಡುವ ಉದ್ದೇಶ ನನಗಿಲ್ಲ’ ಎಂದು ಸಚಿವರು ತಮ್ಮ ಟ್ವಿಟ್ಟರ್ ಮೂಲಕ ತಿಳಿಸಿದ್ದಾರೆ.
‘ಕೆಲ ದಿನಗಳಿಂದ ಮಹತ್ವವಾಗಿರುವ ರಾಜ್ಯ ಬಜೆಟ್ ಅಧಿವೇಶನದಲ್ಲಿ ಕಲಾಪ ನಡೆಯಲು ಬಿಡದೆ ಅನಾವಶ್ಯಕ ವಿಚಾರಗಳನ್ನು ಪ್ರಸ್ತಾಪಿಸಿ ಸದನದ ಮತ್ತು ಶಾಸಕರ ಸಮಯ ವ್ಯರ್ಥ ಮಾಡಿರುವ ಕಾಂಗ್ರೆಸ್, ರಾಜಕೀಯ ದುರುದ್ದೇಶದಿಂದ 6 ಮಂದಿ ಸಚಿವರ ತೇಜೋವಧೆ ಮಾಡಲು ಯತ್ನಿಸುತ್ತಿದೆ’.
6 ಜನ ಮಂತ್ರಿಗಳ ವಿರುದ್ಧ ನಿರಂತರ ಶಂಕೆ, ಆರೋಪ ಮಾಡುತ್ತಿರುವಾಗ ಅವರಿಗಾಗಿರಬಹುದಾದ ಅವಮಾನ, ಮಾನಸಿಕ, ಭಾವನಾತ್ಮಕ ನೋವು ಅರಿವಾಗಲಿಲ್ಲ. ಆದರೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಎನ್ನುವ ನನ್ನ ಹೇಳಿಕೆ ಕೆಲವರಿಗೆ ಬಹಳ ತಪ್ಪಾಗಿ ಕಾಣುತ್ತಿದೆ ಎಂದು ಅವರು ಎಲ್ಲಾ ಶಾಸಕ, ಸಚಿವರಿಗೆ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.