ಶ್ರೀನಗರ(15/10/2020): ವಿಶೇಷ ವಿಧಿ 370ರ ಮರುಸ್ಥಾಪನೆಗಾಗಿ ಜಮ್ಮು ಮತ್ತು ಕಾಶ್ಮೀರ ಪ್ರಮುಖ ಪಕ್ಷಗಳಾದ ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಇತರ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದಾಗಿ ಘೋಷಿಸಿದೆ.
ಮಾಜಿ ಮುಖ್ಯಮಂತ್ರಿ ಮುಫ್ತಿ ಮೆಹಬೂಬಾ ನಾಯಕತ್ವದ ಪಿಡಿಪಿ ಮತ್ತು ಫಾರೂಕ್ ಆಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ರಾಜ್ಯದ ಹಲವು ರಾಜಕೀಯ ಪಕ್ಷಗಳು ಈ ಮೈತ್ರಿಕೂಟದಲ್ಲಿರಲಿದೆ.
ಮೈತ್ರಿಕೂಟದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ಮಾತನಾಡಿ, ಜಮ್ಮುಕಾಶ್ಮೀರದಲ್ಲಿ ವಿಧಿ 370ರ ಮರುಸ್ಥಾಪನೆ ಮಾಡುವ ಉದ್ದೇಶದಿಂದ ನಾವು ಮಹಾ ಮೈತ್ರಿಕೂಟ ರಚನೆ ಮಾಡಿದ್ದೇವೆ. ಈ ಮೈತ್ರಿಕೂಟದ ಹೆಸರು ‘ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕಾರ್ ಡಿಕ್ಲೇರೇಷನ್’ ಎಂದಿದ್ದಾರೆ. ಅಂತೆಯೇ ನಮ್ಮ ಯುದ್ಧವು ಸಾಂವಿಧಾನಿಕ ಯುದ್ಧವಾಗಿದ್ದು, ಭಾರತ ಸರ್ಕಾರವು 2019 ರ ಆಗಸ್ಟ್ 5 ರ ಮೊದಲು ನಾವು ಹೊಂದಿದ್ದ ಹಕ್ಕುಗಳನ್ನು ರಾಜ್ಯದ ಜನರಿಗೆ ಹಿಂದಿರುಗಿಸಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಮೆಹಬೂಬಾ ಮುಫ್ತಿ ಅವರು ನಿನ್ನೆಯಷ್ಟೇ ಗೃಹ ಬಂಧನದಿಂದ ಬಿಡುಗಡೆಗೊಂಡಿದ್ದರು. ಆ ಬಳಿಕ ನ್ಯಾಶನಲ್ ಕಾನ್ಫರೆನ್ಸ್ (ಎನ್ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹಾಗೂ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಅವರನ್ನು ಇಂದು ಭೇಟಿಯಾಗಿದ್ದಾರೆ.