ಬೆಂಗಳೂರು (8-12-2020): ವಿವಾದಿತ ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿಧಾನ ಪರಿಷತ್ ಅಂಗೀಕಾರ ನೀಡಿದೆ.
ಇಲ್ಲಿಯವರೆಗೂ ವಿರೋಧಿಸುತ್ತಿದ್ದ ಜೆಡಿಎಸ್ ಇದಕ್ಕೆ ಬೆಂಬಲ ನೀಡಿದೆ. ಹೀಗಾಗಿ ತಿದ್ದುಪಡಿ ಕಾಯ್ದೆಗೆ 37 ಮತಗಳು ಸಿಗುವಂತಾಯಿತು. ವಿರುದ್ಧವಾಗಿ ಕೇವಲ 21 ಮತಗಳು ಸಿಕ್ಕವು.
ವಿಪಕ್ಷಗಳ ನಾಯಕರು ಮತ್ತು ಸದಸ್ಯರು ತಿದ್ದುಪಡಿ ಕಾಯ್ದೆಯ ದುಷ್ಪರಿಣಾಮಗಳನ್ನು ವಿವರಿಸಿ, ವಿರೋಧ ವ್ಯಕ್ತಪಡಿಸಿದರೆ, ಆಡಳಿತ ಪಕ್ಷದ ಸದಸ್ಯರು ಕಾಯ್ದೆಯನ್ನು ಸಮರ್ಥಿಸುತ್ತಿದ್ದರು. ಅಂಗೀಕಾರಗೊಂಡ ನಂತರ ಬಿಜೆಪಿ ಸದಸ್ಯರು ಜೆಡಿಎಸ್ ಬಗೆಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಅದೇ ವೇಳೆ ಮಸೂದೆ ಅಂಗೀಕಾರವನ್ನು ಪ್ರತಿಭಟಿಸಿ, ಬೆಂಗಳೂರಿನಲ್ಲಿ ರಸ್ತೆ ತಡೆ ನಡೆಸುತ್ತಿದ್ದ ಹಲವು ರೈತರನ್ನು ಬಂಧಿಸಿರುವುದು ವರದಿಯಾಗಿದೆ. ಈ ಸಂದರ್ಭದಲ್ಲಿ ಬಿಜೆಪಿಯ ಜೊತೆಗೆ ಜೆಡಿಎಸ್ ಮೇಲೂ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.