ಮಧ್ಯಪ್ರದೇಶ (02-11-2020): ಕಮಲನಾಥ್ ಸರಕಾರವನ್ನು ಉರುಳಿಸಿ ಬಿಜೆಪಿಗೆ ಸೇರಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಇನ್ನೂ ಕಾಂಗ್ರೆಸ್ ಮೇಲಿನ ತನ್ನ ಪ್ರೀತಿಯನ್ನು ಬಿಟ್ಟಿಲ್ವ ಎಂದು ನೆಟ್ಟಿಗರು ಕೇಳಿದ್ದಾರೆ.
ನಿನ್ನೆ ಚುನಾವಣಾ ಪ್ರಚಾರ ಸಭೆಯಲ್ಲಿ , ಬಿಜೆಪಿ ವೇದಿಕೆಯಲ್ಲಿ ಬಿಜೆಪಿ ಪರವಾಗಿ ಮಾತನಾಡಿ, ಕೊನೆಗೆ ಕಾಂಗ್ರೆಸ್ ನ ಕೈ ಚಿಹ್ನೆಗೆ ಮತ ಹಾಕಿ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದೆ. ಬಿಜೆಪಿ ಅಭ್ಯರ್ಥಿ ಇಮರ್ತಿ ದೇವಿಯವರ ಪರ ಗ್ವಾಲಿಯರ್ ನ ದಬ್ರಾ ಪಟ್ಟಣದಲ್ಲಿ ಪ್ರಚಾರ ನಡೆಸುತ್ತಾ ಭಾಷಣದ ಕೊನೆಗೆ ಜನರಲ್ಲಿ ನವೆಂಬರ್ 3ರ ಉಪ ಚುನಾವಣೆ ದಿನ ನಿಮ್ಮ ಮತವನ್ನು ಕೈಗೆ ಒತ್ತಿ ಎಂದು ಕೇಳಿಕೊಂಡರು.
ತಕ್ಷಣವೇ ತಮ್ಮ ತಪ್ಪನ್ನು ತಿದ್ದಿಕೊಂಡ ಸಿಂಧಿಯಾ, ನಿಮ್ಮ ಮತವನ್ನು ಕಮಲದ ಗುರುತಿಗೆ ಹಾಕಿ ಎಂದು ಕೇಳಿಕೊಂಡರು.
ಈ ವಿಡಿಯೊವನ್ನು ರಾಜ್ಯ ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಸಿಂಧಿಯಾರವರೇ, ಮಧ್ಯ ಪ್ರದೇಶದ ಜನರು ನ. 3 ರಂದು ಕೈಯ ಗುರುತಿಗೆ ಮತ ಹಾಕುತ್ತಾರೆ ಎಂದು ನಿಮಗೆ ಖಂಡಿತಾ ಭರವಸೆ ಕೊಡುತ್ತಾರೆ ಎಂದು ಬರೆದುಕೊಂಡಿದೆ.
ಇನ್ನು ಜ್ಯೋತಿರಾದಿತ್ಯ ಸಿಂಧಿಯಾ ವೀಡಿಯೋ ವೈರಲ್ ಆಗುತ್ತಿದ್ದಂತೆ ಜನರು ಸಿಂಧಿಯಾ ವಿರುದ್ಧ ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.