ಉತ್ತರ ಪ್ರದೇಶ(03-10-2020): ಹತ್ರಾಸ್ ಅತ್ಯಾಚಾರ ಸಂತ್ರಸ್ತೆಯ ಅವಸರದ ದಹನವು ಇಡೀ ಪ್ರಕರಣದಲ್ಲಿ ಉತ್ತರ ಪ್ರದೇಶ ಪೊಲೀಸರ ಪಾತ್ರದ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ.
ಮಾಧ್ಯಮದ ಜೊತೆ ಮಾತನಾಡಿದ 19 ವರ್ಷದ ದಲಿತ ಸಂತ್ರಸ್ತೆಯ ತಂದೆ ನಿಜವಾಗಿಯೂ ರಾತ್ರಿಯಲ್ಲಿ ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದು ಅವರ ಮಗಳನ್ನಾ ಎಂದು ಪ್ರಶ್ನಿಸಿದ್ದಾರೆ. ನಾವು 2 ಗಂಟೆಗಳ ಕಾಲ ಕೇಳಿದರೂ ಪೊಲೀಸರು ಅವಳನ್ನು ಬಲವಂತವಾಗಿ ಅಂತ್ಯಸಂಸ್ಕಾರ ಮಾಡಿದರು. ಆದರೆ ಅವರು ನಮ್ಮ ಮಾತನ್ನು ಕೇಳಲಿಲ್ಲ ಎಂದು ಕಣ್ಣೀರಿಟ್ಟ ತಂದೆ ಹೇಳಿದರು.
ಸಂತ್ರಸ್ತೆಯ ಸಹೋದರನೂ ಕೂಡ ಇದೇ ರೀತಿಯ ಪ್ರಶ್ನೆಯನ್ನು ಕೇಳಿದ್ದಾರೆ.ದಹನ ಮಾಡಿದ ದೇಹವು ನನ್ನ ದೀದಿ ಎಂದು ಅವರು ಸಾಬೀತುಪಡಿಸಬೇಕು. ಅಲ್ಲದೆ, ದೇಹವನ್ನು ಸುಡಲು ಅವರು ಯಾಕೆ ಪೆಟ್ರೋಲ್ ಸುರಿದರು. ಈ ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೂ ನಮಗೆ ಯಾರ ಮೇಲೂ ನಂಬಿಕೆಯಿಲ್ಲ ಎಂದು ಅವರು ಹೇಳಿದರು.
ಅಲ್ಲದೆ, ನಮ್ಮೊಂದಿಗೆ ಕೆಟ್ಟದಾಗಿ ವರ್ತಿಸಿದ ಡಿಎಂ, ಎಸ್ಡಿಎಂ ಬಗ್ಗೆ ಏನು? ಅವರನ್ನು ಅಮಾನತು ಯಾವಾಗ ಮಾಡುತ್ತೀರಾ? ಎಂದು ಪ್ರಶ್ನಿಸಿದ್ದಾರೆ. ಸಂತ್ರಸ್ತೆಯ ಅತ್ತಿಗೆ ಭಯಾನಕತೆಯನ್ನು ವಿವರಿಸಿದ್ದು, ಅವರ ಮನೆಯೊಳಗೆ ಹಲವಾರು ಪೊಲೀಸ್ ಸಿಬ್ಬಂದಿಗಳು ಬಂದು ಪದೇ ಪದೇ ಬೆದರಿಕೆ ಹಾಕುತ್ತಿದ್ದರು.ನಮಗೆ ಬೆದರಿಕೆ ಹಾಕಲಾಯಿತು. ಪ್ರಕರಣವು ಸಂಪೂರ್ಣವಾಗಿ ತಿರುಗುತ್ತದೆ ಎಂದು ನಮಗೆ ತಿಳಿಸಲಾಯಿತು. 25 ಲಕ್ಷ ರೂ. ಪರಿಹಾರ, ಮನೆ ಇತ್ಯಾದಿಗಳನ್ನು ಉಲ್ಲೇಖಿಸಿ ಅವರನ್ನು ಪೀಡಿಸಲಾಗುತ್ತಿತ್ತು. ಆದರೆ ನಮ್ಮದು ದುರಾಸೆಯಲ್ಲ ಮತ್ತು ಯಾವುದೇ ಮನೆ ಬೇಡವೆಂದು ನಾವು ಹೇಳಿದ್ದೇವೆ. ನಮಗೆ ನ್ಯಾಯ ಬೇಕು ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 14 ರಂದು ನಡೆದ ಕ್ರೂರ ಕೃತ್ಯದಲ್ಲಿ ಮಹಿಳೆಯನ್ನು ಸಾಮೂಹಿಕ ದೌರ್ಜನ್ಯಕ್ಕೆ ಒಳಪಡಿಸಿ ಅತ್ಯಾಚಾರ ಮಾಡಲಾಯಿತು. ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಸಂತ್ರಸ್ತೆ ಮಂಗಳವಾರ ನಿಧನರಾಗಿದ್ದರು. ಆ ಬಳಿಕದ ಬೆಳವಣಿಗೆಗಳು ಘಟನೆ ಬಗ್ಗೆ ದೇಶದ ಕಣ್ಣು ತೆರೆಯುವಂತೆ ಮಾಡಿದ್ದವು.