ಪುದುಚೇರಿ(16-02-2021): ಪುದುಚೇರಿ ವಿಧಾನಸಭಾ ಚುನಾವಣೆ 2021 ಸಮೀಪಿಸುತ್ತಿದ್ದಂತೆ ಕಳೆದ ಎರಡು ದಿನಗಳಲ್ಲಿ ನಾಲ್ಕು ಶಾಸಕರು ಪಕ್ಷವನ್ನು ತೊರೆದಿದ್ದರಿಂದ ಪುದುಚೇರಿಯಲ್ಲಿನ ಕಾಂಗ್ರೆಸ್ ಪಕ್ಷವು ಅಲ್ಪಮತಕ್ಕೆ ಇಳಿದಿದೆ.
ರಾಜೀನಾಮೆ ನಂತರ, 30 ಸದಸ್ಯರ ಅಸೆಂಬ್ಲಿಯಲ್ಲಿ ಪಕ್ಷದ ಬಲ 11 ಕ್ಕೆ ಇಳಿದಿದೆ. ಈ ಮಧ್ಯೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಾಳೆ ಪುದುಚೇರಿಗೆ ಭೇಟಿ ನೀಡಲಿದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಪುದುಚೇರಿಯಲ್ಲಿ ಅವರು ಪಕ್ಷದ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.
ಇನ್ನು ಆಡಳಿತಾರೂಢ ಕಾಂಗ್ರೆಸ್ ಮತ್ತೊಂದು ಆಘಾತ ಎಂಬಂತೆ ಪುದುಚೇರಿ ಮುಖ್ಯಮಂತ್ರಿ ವಿ ನಾರಾಯಣಸಾಮಿಯ ಆಪ್ತ ಎ ಜಾನ್ ಕುಮಾರ್ ತಮ್ಮ ಶಾಸಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು 2019 ರ ಉಪಚುನಾವಣೆಯಲ್ಲಿ ಕಾಮರಾಜ್ ನಗರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಅವರು ಪುದುಚೇರಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದ ನಾಲ್ಕನೇ ಶಾಸಕರಾಗಿದ್ದರು.