ನವದೆಹಲಿ(26-01-2021): ದೆಹಲಿಯಲ್ಲಿ ರೈತರ ಪ್ರತಿಭಟನೆ ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿದೆ. ದೆಹಲಿಯ ಹಲವೆಡೆ ಇಂಟರ್ ನೆಟ್ ಸ್ಥಗಿತಗೊಳಿಸಲಾಗಿದೆ. ಕೇಂದ್ರದ ಕೃಷಿ ಕಾಯ್ದೆಯ ವಿರುದ್ಧ ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಲಾಠೀ ಚಾರ್ಜ್, ಕಲ್ಲೆಸೆತಗಳು ವರದಿಯಾಗಿದೆ. ಈ ಮಧ್ಯೆ ಕರ್ನಾಟಕದ ಸಚಿವ ಬಿ.ಸಿ ಪಾಟೀಲ್ ರೈತರ ವಿರುದ್ಧ ಅವಮಾನಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಸಚಿವ ಬಿ.ಸಿ ಪಾಟೀಲ್ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವವರು ಭಯೋತ್ಪದಕರು, ಅವರಿಗೆ ಪಾಕಿಸ್ತಾನ ಸಪೋರ್ಟ್ ಮಾಡುತ್ತಿದೆ ಎಂದು ಕೆಟ್ಟ ರೀತಿಯಲ್ಲಿ ಹೇಳಿಕೆಯನ್ನು ಕೊಟ್ಟಿದ್ದಾರೆ. ಅನ್ನದಾತರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿದ್ದಾರೆ.
ಇಂದು ಬೆಳಿಗ್ಗೆ ಸಿಎಂ ಯಡಿಯೂರಪ್ಪ ಕೂಡ ರೈತರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ರೈತ ಮುಖಂಡರು ಜೀವಂತವಾಗಿದ್ದೇವೆ ಎಂದು ಸಾಬೀತುಪಡಿಸಲು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳಿಕೆಯನ್ನು ನೀಡಿದ್ದರು.
ಕೇಂದ್ರದ ಕಾರ್ಪೋರೇಟರ್ ಪರ ಮಸೂದೆಯನ್ನು ವಿರೋಧಿಸಿದ ರೈತರ ಪ್ರತಿಭಟನೆಯನ್ನು ಕೇಂದ್ರ ಸರಕಾರ ತಡೆಯಲು ಈ ಮೊದಲು ಹಲವು ಪ್ರಯತ್ನವನ್ನು ನಡೆಸಿದೆ. ಇದೀಗ ಕೂಡ ರೈತರ ವಿರುದ್ಧವೇ ಪೊಲೀಸ್ ಬಲವನ್ನು ಪ್ರಯೋಗಿಸುತ್ತಿದ್ದು, ಕಾಯ್ದೆಯನ್ನು ಹಿಂತೆಗೆದುಕೊಳ್ಳದೆ ಪಟ್ಟು ಹಿಡಿದಿದೆ.