ಕೇರಳ(20-12-2020):ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯ ಬಳಿಕ ಕಾಂಗ್ರೆಸ್ ನಲ್ಲಿ ನಾಯಕತ್ವದ ಬದಲಾವಣೆಯ ಕೂಗು ಪ್ರಾರಂಭವಾಗಿದೆ.
ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಗೆ ಹೊಸ ನಾಯಕತ್ವವನ್ನು ನೀಡುವಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೋಸ್ಟರ್ಗಳನ್ನು ಹಾಕಲಾಗಿದ್ದು, ಕಾಂಗ್ರೆಸ್ ನೊಳಗಿದ್ದ ಒಳಜಗಳ ಮತ್ತೆ ಜಗಜ್ಜಾಹೀರಾಗಿದೆ.
ಪೋಸ್ಟರ್ಗಳು ಕೋಝಿಕ್ಕೋಡು, ತಿರುವನಂತಪುರಂ ಮತ್ತು ಕೊಲ್ಲಂ ನಂತರ, ತ್ರಿಶೂರ್ ಪಟ್ಟಣದಲ್ಲಿ ಕಾಣಿಸಿಕೊಂಡಿದೆ.
ಕಾಂಗ್ರೆಸ್ ನಾಯಕ ಕೆ.ಮುರಲೀಧರನ್ ಪರವಾಗಿ ತ್ರಿಶೂರ್ನಲ್ಲಿ ಹೋರ್ಡಿಂಗ್ಸ್ ಮತ್ತು ಪೋಸ್ಟರ್ಗಳು ಕಾಣಿಸಿಕೊಂಡವು. ಕಾಂಗ್ರೆಸ್ ನ್ನು ಉಳಿಸಲು ಮುರಲೀಧರನ್ ಅವರನ್ನು ಕರೆತರುವಂತೆ ಹೋರ್ಡಿಂಗ್ಸ್ ನಲ್ಲಿ ಒತ್ತಾಯಿಸಲಾಗಿದೆ.
ತಿರುವನಂತಪುರಂನಲ್ಲಿ, ಕಾಂಗ್ರೆಸ್ ನಾಯಕ ಕೆ. ಸುಧಾಕರನ್ ಅವರನ್ನು ಬೆಂಬಲಿಸುವ ಪೋಸ್ಟರ್ಗಳು ಕಾಣಿಸಿಕೊಂಡಿವೆ, ಕೊಲ್ಲಂನಲ್ಲಿ ಕೊಲ್ಲಂ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡ ಬಿಂದು ಕೃಷ್ಣ ವಿರುದ್ಧ ಪೋಸ್ಟರ್ಗಳು ಕಾಣಿಸಿಕೊಂಡಿದೆ.
ಕಳಪೆ ಚುನಾವಣಾ ಸಾಧನೆ ಕುರಿತು ಕಾಂಗ್ರೆಸ್ನಲ್ಲಿ ಆಂತರಿಕ ಜಗಳ ತೀವ್ರವಾಗುತ್ತಿದ್ದಂತೆ, ಕೇರಳದ ಇನ್ಚಾರ್ಜ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಅವರು ಮುಂದಿನ ವಾರ ರಾಜ್ಯಕ್ಕೆ ಭೇಟಿ ನೀಡಿ ರಾಜ್ಯ ವಿಧಾನಸಭಾ ಚುನಾವಣೆಗೆ ಪ್ರಚಾರ ಪ್ರಾರಂಭವಾಗುವ ಮೊದಲು ಪಕ್ಷದೊಳಗಿನ ಎಲ್ಲ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಬಗೆಹರಿಸುತ್ತಾರೆ ಎಂದು ಹೇಳಲಾಗುತ್ತಿದೆ.