ಕೋಲ್ಕತ್ತಾ (19-10-2020): ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಹೇಳಿದ್ದಾರೆ. ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ನಡೆದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಿಎಎ ಕಾಯ್ದೆಗೆ ಸಂಸತ್ತಿನಲ್ಲಿ ಅಂಗೀಕಾರ ದೊರೆತಿದೆ. ಅದನ್ನು ಜಾರಿಗೊಳಿಸುವುದು ನಮ್ಮ ಜವಾಬ್ದಾರಿಯಾಗಿದೆ. ಇದರ ಪ್ರಯೋಜನಗಳು ಎಲ್ಲರಿಗೂ ದೊರಕಲಿದೆ. ಕೊರೋನಾ ಕಾರಣದಿಂದಾಗಿ ಇದು ಜಾರಿಯಾಗಲು ವಿಳಂಬವಾಗಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಶೀಘ್ರದಲ್ಲೇ ಸಿಎಎ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿಯವರನ್ನು ಕಟುವಾಗಿ ಟೀಕಿಸಿದ ನಡ್ಡಾ ಮಮತಾ ಅವರು ತನ್ನ ರಾಜಕೀಯ ಉದ್ದೇಶಗಳಿಗಾಗಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದ್ದಾರೆ. ಹಿಂದೂಗಳಿಗೆ ಅವರು ನೋವು ಕೊಡುತ್ತಿದ್ದಾರೆ ಎಂದರು.
ಎನ್ರ್ಸಿ, ಸಿಎಎ ಮತ್ತು ಎನ್ಪಿಆರ್ ವಿವಾದಿತ ಕಾಯ್ದೆಗಳು ದೇಶಾದ್ಯಂತ ಆಕ್ರೋಶಕ್ಕೂ, ತೀವ್ರ ಪ್ರತಿಭಟನೆಗೂ ಕಾರಣವಾಗಿತ್ತು. ಕೊರೋನಾ ಸಂದಿಗ್ಧತೆಯ ಕಾರಣ ಕೊಟ್ಟು ಸಿಎಎ ಜಾರಿಯನ್ನು ಮುಂದೂಡಿತ್ತು. ಕೊರೋನಾ ಸಮಯದಲ್ಲಿ ಪ್ರತಿಭಟನೆಯ ಕಾವೂ ಕಮ್ಮಿಯಾಗಿತ್ತು.
ಕೊರೋನಾದ ಮರೆಯಲ್ಲಿ ಕೇಂದ್ರ ಸರಕಾರದ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯ ನೇತೃತ್ವದ ವಹಿಸಿದವರನ್ನು ಬಂಧಿಸಿತ್ತು ಎಂದು ವಿವಿಧ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ