ಉತ್ತರಪ್ರದೇಶ(16-02-2021): ಅಜಮ್ಗರ್ ಜಿಲ್ಲೆಯಲ್ಲಿ ಬಿಎಸ್ಪಿ ಮುಖಂಡನನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ಕುಂದನ್ಪುರ ಗ್ರಾಮದಲ್ಲಿ ವೈಷಮ್ಯದಿಂದ ಹತ್ಯೆ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಬಿಎಸ್ಪಿ ಮುಖಂಡ ಕಲಾಮುದ್ದೀನ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಆತನ ವಿರುದ್ಧ ಕೊಲೆ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಸ್ಪಿ ಸುಧೀರ್ ಕುಮಾರ್ ಸಿಂಗ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಕಲಾಮುದ್ದೀನ್ ಕ್ರಿಮಿನಲ್ ದಾಖಲೆಯನ್ನು ಹೊಂದಿದ್ದನು. ಎರಡು ಕೊಲೆ ಪ್ರಕರಣಗಳಲ್ಲಿ ಅವನು ಎರಡು ಬಾರಿ ಜೈಲಿಗೆ ಹೋಗಿದ್ದನು. ನಾವು ಘಟನೆಯ ಬಗ್ಗೆ ಪ್ರಕರಣ ದಾಖಲಿಸುತ್ತಿದ್ದೇವೆ ಮತ್ತು ಮೃತರ ಕುಟುಂಬದಿಂದ ಇನ್ನೂ ದೂರು ಬಂದಿಲ್ಲ ಎಂದು ಎಸ್ಪಿ ಹೇಳಿದರು.
ಬಿಎಸ್ಪಿ ಪಕ್ಷದ ಅಜಮ್ಗರ್ ವಲಯದ ಉಸ್ತುವಾರಿ ನಾಯಕ ಸುನೀಲ್ ಕುಮಾರ್ ಮಾಹಿತಿ ನೀಡಿ ಕಲಾಮುದ್ದೀನ್ ಅವರು ನಿಜಾಮಾಬಾದ್ ಸ್ಥಾನದಿಂದ ಪಕ್ಷದ ವಿಧಾನಸಭಾ ಅಭ್ಯರ್ಥಿಯಾಗಿದ್ದರು. ಅವರು ಪ್ರಸ್ತುತ ಹುದ್ದೆಯನ್ನು ಅಲಂಕರಿಸದಿದ್ದರೂ, ಅವರು ಪಕ್ಷದಲ್ಲಿದ್ದರು ಮತ್ತು ಪಕ್ಷದ ನಾಯಕರಾಗಿದ್ದರು ಎಂದು ಹೇಳಿದರು.