ಅಸ್ಸಾಂ: ಕಾಂಗ್ರೆಸ್ ಮತ್ತು ಅವರ ನೇತಾರ ರಾಹುಲ್ ಗಾಂಧಿ ದೇಶವನ್ನು ವಿಭಜನೆ ಮಾಡಲು ಬಯಸುವ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ಬಿಜೆಪಿ ಮತ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಭಾನುವಾರ ಅಸ್ಸಾಂನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಅತೀ ಪುರಾತನ ಪಕ್ಷ 15 ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸಿದೆ. ಅಸ್ಸಾಂನ್ನು ಪ್ರತಿನಿಧಿಕರಿಸಿದವರೇ ಪ್ರಧಾನಿ ಆಗಿದ್ದಾರೆ. ಆದರೆ ನೆರೆ ರಾಜ್ಯದಿಂದ ಬರುವ ಅಕ್ರಮ ವಲಸಿಗರ ಬಗ್ಗೆ ಕ್ರಮಕೈಗೊಳ್ಳಲು ಸಾಧ್ಯವಾಗಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ. ಸಂಸತ್ತಿನ ಮೇಲ್ಮನೆಯಲ್ಲಿ ಅಸ್ಸಾಂನ್ನು ಪ್ರತಿನಿಧಿಕರಿಸಿದ್ದ ಮನಮೋಹನ್ ಸಿಂಗ್ ಅವರನ್ನು ಉಲ್ಲೇಖಿಸಿ ಶಾ ಈ ಮಾತನ್ನು ಹೇಳಿದ್ದಾರೆ. ಚುನಾವಣೆ ಗೆಲ್ಲಲು ಕಾಂಗ್ರೆಸ್ ಯಾವ ಹಂತಕ್ಕೆ ಬೇಕಾದರೂ ಹೋಗಬಹುದು ಎಂದು ಅವರು ಹೇಳಿದ್ದಾರೆ.
ಕಳೆದ 5 ವರ್ಷಗಳಲ್ಲಿ ಕಾಝಿರಂಗ ರಾಷ್ಟ್ರೀಯ ಉದ್ಯಾನವನದಲ್ಲಿ ಭೂಮಿ ಒತ್ತುವರಿ ಮಾಡಿಕೊಂಡು ಧಾರ್ಮಿಕ ಸಂಘಟನೆಗಳ ಜಮೀನು ವಶಪಡಿಸಿಕೊಂಡಿದ್ದ ನುಸುಳುಕೋರರನ್ನು ಬಿಜೆಪಿ ಯಶಸ್ವಿಯಾಗಿ ಹೊರದಬ್ಬಿದೆ. 5 ವರ್ಷಗಳ ಹಿಂದೆ ನಾನು ಬಿಜೆಪಿ ಅಧ್ಯಕ್ಷನಾಗಿದ್ದಾಗ ಅಸ್ಸಾಂನ್ನು ಆಂದೋಲನ ಮುಕ್ತ, ಭಯೋತ್ಪಾದನೆ ಮುಕ್ತ ರಾಜ್ಯಮಾಡುವುದಾಗಿ ಭರವಸೆ ನೀಡಿದ್ದೆ. ನಾವು ನಮ್ಮ ಭರವಸೆಯನ್ನು ಪೂರೈಸಿದ್ದೇವೆ. ಇಲ್ಲಿ ಈಗ ಯಾವುದೇ ಚಳವಳಿ ಅಥವಾ ಭಯೋತ್ಪಾದಕರು ಇಲ್ಲ. ಅಸ್ಸಾಂ ಶಾಂತಿ ಮತ್ತು ಅಭಿವೃದ್ಧಿಯ ಮಂತ್ರ ಪಠಿಸುತ್ತಿದೆ. ನಮಗೆ ಇನ್ನೊಂದು ಐದು ವರ್ಷ ಕೊಡಿ ನಾವು ಒಳನುಸುಳುವಿಕೆ ಸಮಸ್ಯೆಯನ್ನು ಪರಿಹರಿಸುತ್ತೇವೆ ಎಂದಿದ್ದಾರೆ ಅಮಿತ್ ಶಾ.
ಅಸ್ಸಾಂನಲ್ಲಿ ಕಾಂಗ್ರೆಸ್ ಎಐಯುಡಿಎಫ್ ಜತೆ, ಕೇರಳದಲ್ಲಿ ಮುಸ್ಲಿಂ ಲೀಗ್ ಮತ್ತು ಪಶ್ಚಿಮ ಬಂಗಾಳದಲ್ಲಿ ಇಂಡಿಯನ್ ಸೆಕ್ಯುಲರ್ ಫ್ರಂಟ್ ಜತೆ ಮೈತ್ರಿ ಮಾಡಿಕೊಂಡಿದೆ. ಅಸ್ಸಾಂ ರಾಜ್ಯ ಅಜ್ಮಲ್ ಕೈಯಲ್ಲಿ ಸುರಕ್ಷಿತವಲ್ಲ. ಅಸ್ಸಾಂನ ಜನರು ಪ್ರಧಾನಿ ನರೇಂದ್ರ ಮೋದಿ ಅಥನಾ ಬದ್ರುದ್ದೀನ್ ಅಜ್ಮಲ್ ಇವರಲ್ಲಿ ಯಾವ ರಾಜಕೀಯ ನಾಯಕರು ಜನರ ಕಲ್ಯಾಣದ ಬಗ್ಗೆ ಕಾಳಜಿ ವಹಿಸುತ್ತಾರೆ ಎಂಬುದನ್ನು ನಿರ್ಧರಿಸಲಿ ಎಂದಿದ್ದಾರೆ.