ಬೆಂಗಳೂರು(29/10/2020): ಸ್ಯಾಂಡಲ್ ವುಡ್ ಮಾದಕ ಜಾಲದ ಪ್ರಕರಣ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈ ಸಂಬಂಧ ಇದೀಗ ಕೇರಳದ ಮಾಜಿ ಗೃಹ ಸಚಿವ ಹಾಗೂ ಸಿಪಿಎಂ ಕೇರಳ ರಾಜ್ಯ ಕಾರ್ಯದರ್ಶಿ ಕೋಡಿಯೇರಿ ಬಾಲಕೃಷ್ಣನ್ ಪುತ್ರ ಬಿನೇಶ್ ಕೋಡಿಯೇರಿಯನ್ನು ಬೆಂಗಳೂರು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರಿನ ಕಾಟನ್ ಪೇಟೆಯಲ್ಲಿ ದಾಖಲಾದ ಮಾದಕ ಜಾಲ ಪ್ರಕರಣದ ಪ್ರಮುಖ ಆರೋಪಿ ಅನೂಪ್ ನೊಂದಿಗೆ ಬೀನೇಶ್ ನಂಟು ಹೊಂದಿದ್ದು, ಕಮ್ಮನಹಳ್ಳಿಯಲ್ಲಿ ರೆಸ್ಟೋರೆಂಟ್ ವೊಂದು ತೆರೆಯಲು ಬಿನೀಶ್ ಡ್ರಗ್ಸ್ ಪೆಡ್ಲರ್ ಅನೂಪ್ಗೆ 50 ಲಕ್ಷ ರೂ ಹಣಕಾಸಿನ ನೆರವು ನೀಡಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ಇ ಡಿ ನೋಟಿಸ್ ನೀಡಿತ್ತು. ಹೀಗಾಗಿ ಅ. 6 ರಂದು ವಿಚಾರಣೆಗೆ ಹಾಜರಾಗಿ 6 ಗಂಟೆಗಳ ಕಾಲ ಬೀನೇಶ್ ವಿಚಾರಣೆ ಎದುರಿಸಿದ್ದಾರೆ.
ಈ ವೇಳೆ ಅವರಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ, ಇಂದು ಮತ್ತೆ ಬೆಂಗಳೂರಿನ ಶಾಂತಿನಗರದ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದ ಬಿನೇಶ್ ಸೂಕ್ತ ದಾಖಲೆ ನೀಡದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ ಎನ್ನಲಾಗಿದೆ.