ನವದೆಹಲಿ(1-11-2020): “ಬಿಜೆಪಿ ಲೈಟ್” ಆಗಲು ಶ್ರಮಿಸಿದರೆ, ಕಾಂಗ್ರೆಸ್ “ಝೀರೋ” ಆಗಬಹುದು ಎಂದು ಕಾಂಗ್ರೆಸ್ ನಾಯಕ ಮತ್ತು ಎಂಪಿ ಶಶಿ ತರೂರ್ ಹೇಳಿದ್ದಾರೆ. ತನ್ನ ಹೊಚ್ಚ ಹೊಸ ಪುಸ್ತಕ “ದಿ ಬ್ಯಾಟಲ್ ಆಫ್ ಬಿಲಾಂಗಿಂಗ್” ಪುಸ್ತಕದ ಕುರಿತು ಪಿಟಿಐ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಕಾಂಗ್ರೆಸ್ ‘ಮೃದು ಹಿಂದುತ್ವ’ ನೀತಿಯನ್ನು ಅನುಸರಿಸುತ್ತಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ, “ಈ ರೀತಿಯ ನೀತಿಯು ಕಾಂಗ್ರೆಸ್ಸಿಗೆ ನಷ್ಟವನ್ನಲ್ಲದೇ ಯಾವುದೇ ಲಾಭ ತರದು. ಈ ನಿಮ್ಮ ಪ್ರಶ್ನೆಯು ಎಲ್ಲಾ ಪ್ರಗತಿಪರರ ಪ್ರಶ್ನೆಯೂ ಆಗಿದೆ. ಆದರೆ ಕಾಂಗ್ರೆಸ್ ಯಾವತ್ತೂ ಬಿಜೆಪಿಯಾಗಿ ಬದಲಾಗಲು ಸಾಧ್ಯವಿಲ್ಲ. ನಮ್ಮಂಥವರು ಪಕ್ಷದಲ್ಲಿ ಇರುವವರೆಗೆ ಮೃದು ಹಿಂದುತ್ವಕ್ಕೆ ಅವಕಾಶ ಮಾಡಿಕೊಡುವುದಿಲ್ಲ” ಎಂದು ಶಶಿ ತರೂರ್ ಹೇಳಿದರು.
ದೇಶದಲ್ಲಿ ಜಾತ್ಯತೀತ ಸಿದ್ಧಾಂತವನ್ನು ಪಾಲಿಸಿಕೊಂಡು ಹೋಗುವುದು ತುಂಬಾ ಅಪಾಯಕಾರಿ ಸಾಹಸವಾಗಿ ಬದಲಾಗಿದೆ. ಆಡಳಿತ ನಡೆಸುತ್ತಿರುವವರಿಗೆ ಸಂವಿಧಾನದಿಂದ ‘ಜಾತ್ಯತೀತ’ ಪದವನ್ನು ತೆಗೆದುಹಾಕಲು ಸಾಧ್ಯವಾಗುವುದಾದರೆ ಅದನ್ನೂ ತೆಗೆದು ಬಿಡಬಹುದು ಎಂದು ತರೂರ್ ಮುಂದುವರಿದು ಹೇಳಿದರು.
ಕಾಂಗ್ರೆಸ್ಸಿಗೆ ಹಿಂದೂ ಧರ್ಮ ಮತ್ತು ಹಿಂದುತ್ವಗಳ ನಡುವಿನ ವ್ಯತ್ಯಾಸ ಗೊತ್ತಿದೆ. ಹಿಂದೂ ಧರ್ಮವು ಒಳಗೊಳ್ಳುವಿಕೆಯ ಬಗೆಗೆ ಹೇಳಿದರೆ, ಹಿಂದುತ್ವವು ಇದಕ್ಕೆ ವ್ಯತಿರಿಕ್ತವಾಗಿದೆ ಎಂದರು.