ರಿಯಾದ್(7-12-2020): ಮನಾಮಾ ಭದ್ರತಾ ಸಂವಾದ ಸಮ್ಮೇಳನದಲ್ಲಿ ಮಾತನಾಡಿದ ಸೌದಿ ರಾಜಕುಮಾರ ತುರ್ಕ್ ಅಲ್ ಫೈಸಲ್, ಇಸ್ರೇಲ್ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಕಪಟತೆಯು ಇಸ್ರೇಲ್ ಗುರುತಿನ ಚಿಹ್ನೆಯಾಗಿದ್ದು, ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಸೌದಿ ವಿರೋಧಿ ಕಾರ್ಯಾಚರಣೆಗೆ ತನ್ನ ಬೇಟೆ ನಾಯಿಗಳನ್ನು ಅದು ಛೂ ಬಿಟ್ಟಿದೆಯೆಂದು ಹೇಳಿದ್ದಾರೆ.
ತನ್ನ ಸರ್ವನಾಶವನ್ನು ಬಯಸುವ ರಕ್ತದಾಹಿಗಳಾದ ಶತ್ರುಗಳಿಂದ ತಾನು ಸುತ್ತುವರಿದಿರುವುದಾಗಿ ಇಸ್ರೇಲ್ ವಾದಿಸುತ್ತಿದೆ. ಆದರೆ ವಾಸ್ತವದಲ್ಲಿ ಸಾವಿರಗಟ್ಟಳೆ ಅಮಾಯಕರ ಫೆಲಸ್ತೀನಿಯನ್ನರನ್ನು ಇಸ್ರೇಲ್ ಜೈಲಿಗಟ್ಟಿದೆಯೆಂದು ಅವರು ವಾಗ್ದಾಳಿ ನಡೆಸಿದರು. ಫೆಲಸ್ತೀನಿಯನ್ನರ ಅಗಾಧ ವಿಸ್ತೀರ್ಣದ ಭೂಮಿಯನ್ನೂ ವಶಪಡಿಸಿಕೊಂಡಿದೆಯಲ್ಲದೇ, ಇನ್ನಷ್ಟು ಅತಿಕ್ರಮಣಕ್ಕೆ ಮುಂದಡಿಯಿಡುತ್ತಿದೆ. ಪರಮಾಣು ಬಾಂಬುಗಳ ದೊಡ್ಡ ಶೇಖರಣೆಯೇ ಅದರ ಬಳಿಯಿದೆ ಎಂದರು.
ಅರಬ್ ಶಾಂತಿ ಸಂಧಾನವನ್ನು ಇಸ್ರೇಲ್ ಮಾನ್ಯ ಮಾಡಬೇಕು. ಇರಾನನ್ನು ಜೊತೆ ಸೇರಿಸಿ ಮುನ್ನಡೆಯುವ ದಾರಿ ಇದೊಂದೇ ಆಗಿದೆಯೆಂದು ಅಲ್ ಫೈಸಲ್ ಅಭಿಪ್ರಾಯಪಟ್ಟರು.