ಮುಂಬೈ: ಮರಾಠಿ ಸಾಹಿತ್ಯದ ಹೆಸರಾಂತ ಬರಹಗಾರ, ಲೇಖಕ ಶರಣಕುಮಾರ ಲಿಂಬಾಳೆ ಅವರು 2020ನೇ ಸಾಲಿನ ಪ್ರತಿಷ್ಠಿತ ‘ಸರಸ್ವತಿ ಸಮ್ಮಾನ‘ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಐದು ಭಾಷೆಗಳ ಲೇಖಕರಿಗೆ ಪ್ರಶಸ್ತಿ ಘೋಷಣೆಯಾಗಿದೆ. ಶರಣಕುಮಾರ ಅವರು ಮರಾಠಿ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸಾಹಿತ್ಯ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಗೌರವಿಸಲಾಗಿದೆ.
ಮಹಾರಾಷ್ಟ್ರದ ಖ್ಯಾತ ಲೇಖಕ ಶರಣಕುಮಾರ ಲಿಂಬಾಳೆ ಅವರು ಕನ್ನಡ ಗಡಿಪ್ರದೇಶವಾದ ಸೊಲ್ಲಾಪುರದವರು. ದಲಿತ ಸಾಹಿತ್ಯ ಲೇಖಕರಾದ ಲಿಂಬಾಳೆ ಅವರು ಹಲವು ಸಾಮಾಜಿಕ ಕೃತಿಗಳನ್ನು ರಚಿಸಿದ್ದಾರೆ. 2018ರಲ್ಲಿ ಬಿಡುಗಡೆಯಾದ ಶರಣಕುಮಾರ ಅವರ “ಸನಾತನ” ಎನ್ನುವ ಉಪನ್ಯಾಸ ಕೃತಿಗೆ ಸರಸ್ವತಿ ಸಮ್ಮಾನ ಪ್ರಶಸ್ತಿಗೆ ಆಯ್ಕೆಯಾಗಿದೆ.ದಲಿತ ಸಂಘರ್ಷದ ಹಲವು ಸಾಮಾಜಿಕ ಘಟನೆಗಳನ್ನು ಒಳಗೊಂಡಿರುವ ‘ಸನಾತನ’ ಕೃತಿ ಮರಾಠಿ ಸಾಹಿತ್ಯದ ಅತ್ಯುತ್ತಮ ಕೃತಿಗಳಲ್ಲಿ ಒಂದಾಗಿದೆ.
1991ರಲ್ಲಿ ಸ್ಥಾಪಿತವಾದ ಕೆ.ಕೆ.ಬಿರ್ಲಾ ಫೌಂಡೇಶನ್, ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಭಾರತದ ನಾಗರಿಕರಿಗೆ ‘ಸರಸ್ವತಿ ಸಮ್ಮಾನ’ ಪ್ರಶಸ್ತಿ ಗೌರವಿಸುತ್ತದೆ. ಈ ಪ್ರತಿಷ್ಠಿತ ಪ್ರಶಸ್ತಿಯು 15 ಲಕ್ಷ ರೂಪಾಯಿ ನಗದು ಬಹುಮಾನ ಸೇರಿದಂತೆ ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರ ಒಳಗೊಂಡಿರುವ ಸಾಹಿತ್ಯ ಕ್ಷೇತ್ರದ ಅತ್ಯುನ್ನತ ಗೌರವ ಪ್ರಶಸ್ತಿಯಾಗಿದೆ.