ಉತ್ತರಪ್ರದೇಶ(17-11-2020):ಉತ್ತರಪ್ರದೇಶ ಅಸೋಧರ್ ಪ್ರದೇಶದ ಹಳ್ಳಿಯೊಂದರಲ್ಲಿ ಇಬ್ಬರು ಅಪ್ರಾಪ್ತ ದಲಿತ ಸಹೋದರಿಯರ ಮೃತದೇಹ ಕೊಳದಲ್ಲಿ ಪತ್ತೆಯಾಗಿದೆ. ಅತ್ಯಾಚಾರ-ಕೊಲೆ ಆರೋಪವನ್ನು ಬಾಲಕಿಯರ ಕುಟುಂಬಸ್ಥರು ಮಾಡಿದ್ದಾರೆ.
ದಿಲೀಪ್ ಧೋಭಿ ಎಂಬವರ ಪುತ್ರಿಯರಾದ ಸುಮಿ (12) ಮತ್ತು ಕಿರಣ್ (8) ಅವರ ಶವಗಳನ್ನು ಕೊಳದಿಂದ ವಶಪಡಿಸಿಕೊಳ್ಳಲಾಗಿದೆ. ಮೃತದೇಹಗಳ ಕಣ್ಣುಗಳಲ್ಲಿ ಗಾಯದ ಗುರುತುಗಳು ಪತ್ತೆಯಾಗಿದೆ ಎಂದು ಎಎಸ್ಪಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಬಾಲಕಿಯರು ತರಕಾರಿಗಳನ್ನು ತರಲು ಮಧ್ಯಾಹ್ನ ಹೊಲಕ್ಕೆ ತೆರಳಿದ್ದರು. ಆದರೆ ಹಿಂತಿರುಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ನಂತರ ದುಷ್ಕರ್ಮಿಗಳು ಬಾಲಕಿಯರನ್ನು ಕೊಂದಿದ್ದಾರೆ ಎಂದು ಸಂತ್ರಸ್ತರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಬರಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.